ಕನ್ನಡ ಶ್ರೀಮಂತಗೊಳಿಸಿದ ಕಲೆ ಯಕ್ಷಗಾನ: ಮೊಗಸಾಲೆ
ಲೇಖಕರು : ಕನ್ನಡಪ್ರಭ
ಶುಕ್ರವಾರ, ಜನವರಿ 24 , 2014
|
ಕೆರೆಮನೆ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ 80 ವರ್ಷಗಳ ಸಂಭ್ರಮಾಚರಣೆ ಮತ್ತು ಯಕ್ಷಗಾನ ರಂಗಕಲೆಯಲ್ಲಿ ಹಾಸ್ಯಪಾತ್ರದ ಮೂಲಕ ಮನೆಮಾತಾದ ಹಿರಿಯ ಹಾಸ್ಯಕಲಾವಿದ ಕುಂಜಾಲು ರಾಮಕೃಷ್ಣ ನಾಯಕ್ ಬ್ರಹ್ಮಾವರ ಇವರಿಗೆ ಯಕ್ಷಗಾನದ ಸ್ತ್ರೀ ವೇಷದ ಪಾತ್ರಕ್ಕೆ ತಾರಾಮೌಲ್ಯ ತಂದುಕೊಟ್ಟಿರುವ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪ್ರದಾನದೊಂದಿಗೆ ಐದು ದಿನಗಳ ಕೆರೆಮೆನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವಕ್ಕೆ ತೆರೆ ಎಳೆಯಲಾಯಿತು.
ಗುಣವಂತೆಯ ಯಕ್ಷಾಂಗಣದ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ನಾಟ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡ ಸಾಹಿತಿ ಡಾ.ನಾ. ಮೊಗಸಾಲೆ ಮಾತನಾಡಿ, ಜನಸಾಮಾನ್ಯರಿಂದ ಪೋಷಿಸಿ ಕನ್ನಡವನ್ನು ಶ್ರೀಮಂತಗೊಳಿಸಿದ ಕಲೆ ಯಕ್ಷಗಾನವಾಗಿದ್ದು ಜಾಗತೀಕರಣದ ನೆಲೆಯಲ್ಲಿ ಇದನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದರು.
ಖ್ಯಾತ ಮನೋವೈದ್ಯ ಶಿವಮೊಗ್ಗದ ಡಾ.ಕೆ.ಆರ್.ಶ್ರೀಧರ ಮಾತನಾಡಿ, ಮನೋವೈದ್ಯರಿಗೂ ರಂಗಕರ್ಮಿಗಳಿಗೂ ಸಾಕಷ್ಟು ಸಾಮ್ಯತೆಯಿದೆ. ಮನಸ್ಸನ್ನು ಕಲೆ ಶುದ್ದೀಕರಿಸುತ್ತಿದೆ. ಆರೋಗ್ಯಕರವಾಗಿಸುತ್ತಿದೆ. ಭಾವನಾತ್ಮಕ ಸಮತೋಲನ, ಸೃಜನಶೀಲತೆ, ವ್ಯಕ್ತಿತ್ವವನ್ನು ಕಲೆ ರೂಪಿಸುತ್ತಿದ್ದು ವ್ಯಕ್ತಿತ್ವ ವಿಕಸನದಲ್ಲಿ ಯಕ್ಷಗಾನದ ಪ್ರಭಾವ ಮಹತ್ವದ್ದಾಗಿದೆ ಎಂದರು.
ಬೆಂಗಳೂರು ಸಪ್ತಕ ಸಂಸ್ಥೆಯ ಜಿ.ಎಸ್. ಹೆಗಡೆ, ಕೆಪಿಸಿಸಿ ಸದಸ್ಯ ಶಂಭುಗೌಡ ಮಾತನಾಡಿದರು. ಇದೇ ವೇಳೆ ಭಾರತೀಯ ವಿಕಾಸ ಟ್ರಸ್ಟ್ ಉಡುಪಿ ಟ್ರಸ್ಟಿ ಕೆ.ಎಂ. ಉಡುಪ ಮಂದರ್ತಿ, ಸಂಶೋಧಕ ಡಾ.ಗುರುರಾವ್, ಎನ್. ರಾಮಚಂದ್ರ ಶಿವಮೊಗ್ಗ, ಶಾಮಸುಂದರ ಭಾಗ್ವತ್ ಹೆಂಗವಳ್ಳಿ, ಪ್ರೊ.ಬಿ. ಹರಿಶ್ಚಂದ್ರ ಭಟ್ಟ, ಕೋಣಿ ನರಸಿಂಹ ಕಾರಂತ, ಕೆ.ಜಿ. ಹೆಗಡೆ ಅಣ್ಣುಹಿತ್ತಲು ಇವರಿಗೆ ಮಂಡಳಿಯ 80ರ ಸಂಭ್ರಮಾಚರಣೆಯ ಸನ್ಮಾನ ನೀಡಿ ಗೌರವಿಸಲಾಯಿತು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿದರು. ಇದೇ ಸಂದರ್ಭ ಅನನ್ಯ ಸಾಂಸ್ಕೃತಿಕ ಸಂಸ್ಥೆ ಮುಖ್ಯಸ್ಥ ಡಾ.ಆರ್.ವಿ. ರಾಘವೇಂದ್ರ ಶ್ರೀಮಯ 80ರ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಶ್ರೀಮಯ 80ರ ವಿಶೇಷ ಸುಮಾನಂದ ಕುರಿತು ನರಸಿಂಹ ಹೆಗಡೆ ಕೆರೆಮನೆ ಮಾತನಾಡಿದರು.
ಪ್ರಶಾಂತ ಹೆಗಡೆ ಅಭಿನಂದಿಸಿದರು. ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ ಪುರಸ್ಕೃತರ ಕುರಿತು ನಾರಾಯಣ ಯಾಜಿ ಸಾಲೇಬೈಲು ಮಾತನಾಡಿದರು. ಸಂತೇಗುಳಿ ನಾರಾಯಣ ಭಟ್ಟ ಸಮಾರೋಪ ಭಾಷಣ ಮಾಡಿದರು. ರಾಷ್ಟ್ರೀಯ ನಾಟ್ಯೋತ್ಸವದ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಸ್ವಾಗತಿಸಿದರು. ಮಂಡಳಿಯ ನಿರ್ದೇಶಕ ಶಿವಾನಂದ ಹೆಗಡೆ ಕೃತಜ್ಞತೆ ವ್ಯಕ್ತಪಡಿಸಿದರು. ಎಸ್.ಎಸ್. ಹೆಗಡೆ, ಎಲ್.ಎಂ. ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.
ಕೃಪೆ :
http://www.kannadaprabha.com
|
|
|